ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) -ಧಾರವಾಡ

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದ 3ನೇ ವಾರ್ಷಿಕೋತ್ಸವ ಆಚರಣೆ

Home

3rd Anniversary Celebration of Ayushman Bharat-Arogya Karnataka

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಯ ಸಭಾಂಗಣದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ದಿನಾಚರಣೆ ಯ ನಿಮಿತ್ತ  "ಆರೋಗ್ಯ ಮಂಥನ ಹಾಗೂ ಆಯುಷ್ಮಾನ್ ಭಾರತ್ ಪಕ್ವಾರ್" ಕಾರ್ಯಕ್ರಮವನ್ನು  ದಿನಾಂಕ 23.09.2021 ರಂದು ಆಯೋಜಿಸಲಾಗಿತ್ತು.   ಈ ಕಾರ್ಯಕ್ರಮದಲ್ಲಿ ಸುವರ್ಣ ಆರೋಗ್ಯ ಟ್ರಸ್ಟ್ ನ ಜಿಲ್ಲಾ ಸಂಯೋಜಕರಾದ ಡಾ.ಸುಮಯ್ಯ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ದೇಶದಲ್ಲಿ ಆಯುಷ್ಮಾನ್ ಯೋಜನೆಯು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು,  ಧಾರವಾಡ ಜಿಲ್ಲೆಯಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಬಹುತೇಕ ಜನರು ಈ ಯೋಜನೆಯ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆಂದು ತಿಳಿಸಿದರು. ಅನೇಕ ಕುಟುಂಬಗಳು ತುರ್ತು ವೈದ್ಯಕೀಯ ಸಂದರ್ಭದಲ್ಲಿ ಹೆಚ್ಚು ಪ್ರಯೋಜನಗಳನ್ನು ಪಡೆದುಕೊಂಡಿವೆಯೆಂದು ತಿಳಿಸಿದರು.  ಈ ಕಾರ್ಯಕ್ರಮವನ್ನು  ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ.ಯಶವಂತ ಮದೀನಕರ್ ರವರು ಸಸಿಗಳಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿದರು. ಇವರು ಮಾತನಾಡಿ, ಆಯುಷ್ಮಾನ್ ಯೋಜನೆ ಜಾರಿಯಾದ ನಂತರ ಅನೇಕ ಕುಟುಂಬದ ರೋಗಿಗಳು ಆರೋಗ್ಯ ಸೌಲಭ್ಯಗಳನ್ನು ಕಷ್ಟಕರ ಸಂದರ್ಭಗಳಲ್ಲಿ ಪಡೆದುಕೊಂಡಿದ್ದಾರೆ. ಇಂತಹ ಯೋಜನೆಗಳನ್ನು ಆಸ್ಪತ್ರೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು..

ಆರೋಗ್ಯ ಮಿತ್ರರು ಆಯುಷ್ಮಾನ್ ಯೋಜನೆಯ ಆಧಾರಸ್ತಂಭದಂತೆ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆಂದು ಪ್ರಶಂಸಿದರು.  ರೋಗಿಗಳಿಗೆ ಆಯುಷ್ಮಾನ್ ಯೋಜನೆಯ ಬಗ್ಗೆ ಮಾಹಿತಿ ಕೊರತೆ ಇದ್ದಲ್ಲಿ  ಆಪ್ತಸಮಾಲೋಚನೆ ಮಾಡಬೇಕೆಂದು ತಿಳಿಸಿದರು. ಡಿಮ್ಹಾನ್ಸ್ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಶ್ರೀನಿವಾಸ ಕೊಸಗಿ ಯವರು ಮಾತನಾಡಿ ಆಯುಷ್ಮಾನ್ ಯೋಜನೆಯನ್ನು ಡಿಮ್ಹಾನ್ಸ್ ಸಂಸ್ಥೆಯಲ್ಲಿ ಪ್ರಾರಂಭಿಸಿ 03 ವರ್ಷಗಳು ಕಳೆದಿದ್ದು ಉತ್ತಮ ಪ್ರಗತಿಯತ್ತ ಸಾಗುತ್ತಿದೆ, ಈ ನಿಟ್ಟಿನಲ್ಲಿ ಆಯುಷ್ಮಾನ್ ಯೋಜನೆಯ ವಿಭಾಗದ ಸಿಬ್ಬಂದಿಗಳ ಉತ್ತಮ ಕೆಲಸಕ್ಕೆ ಪ್ರಶಂಸಿದರು. ಆಸ್ಪತ್ರೆಗೆ ಬರುವ ರೋಗಿಗಳು ಆಧಾರ್ ಕಾರ್ಡ ಮತ್ತು ಬಿ.ಪಿ.ಎಲ್ ಕಾರ್ಡ ಹೊಂದಿದ್ದಲ್ಲಿ ಈ ಸೌಲಭ್ಯಗಳನ್ನು ಪಡೆಯಲು ಸರಳವಾಗುತ್ತದೆಯೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ವಹಿಸಿದ ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ  ಡಾ.ಮಹೇಶ ದೇಸಾಯಿವರು ಮಾತನಾಡಿ, ಆಯುಷ್ಮಾನ್ ತಂಡದವರಿಂದ ಉತ್ತಮ ಕೆಲಸವಾಗುತ್ತಿದ್ದು ಇದರಿಂದ ಅನೇಕ ರೋಗಿಗಳಿಗೆ ಪ್ರಯೋಜನವಾಗಿದೆ, ಬಹುತೇಕ ಮಾನಸಿಕ ಕಾಯಿಲೆಗಳನ್ನು ಆಯುಷ್ಮಾನ್ ಯೋಜನೆಯಲ್ಲಿ ಸೇರಿಸಿದೆ. ಇದರಿಂದ ವೈದ್ಯಕೀಯ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಹಣಕಾಸಿನ ತೊಂದರೆಯಿರುವ ಕುಟುಂಬಗಳಿಗೆ ಆಯುಷ್ಮಾನ್ ಯೋಜನೆಯು ಸಹಾಯಮಾಡುತ್ತದೆ. ಈ ಯೋಜನೆಯನ್ನು ಜಾರಿಗೊಳಿಸಿದ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೆಂದ್ರ ಮೋದಿಯವರಿಗೆ ಅಭಿನಂದನೆಗಳೆಂದು ತಿಳಿಸಿದರು. ಡಿಮ್ಹಾನ್ಸ್ ಸಂಸ್ಥೆಯಲ್ಲಿ ಆಯುಷ್ಮಾನ್ ಯೋಜನೆ ಅನುಷ್ಠಾನದಿಂದ ಮಾನಸಿಕ ರೋಗಿಗಳ ಆರೈಕೆದಾರರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಅನೇಕ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.ಕರ್ನಾಟಕದಲ್ಲಿ ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ್‌ ಮತ್ತು ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆಗಳೆರಡನ್ನೂ ವಿಲೀನಗೊಳಿಸಲಾಗಿದೆ. ಹೀಗಾಗಿ 'ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ' ಎಂಬ ಹೆಸರಿನಲ್ಲಿ ಜಾರಿಯಾಗುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಯೋಜನೆ ಜಾರಿಯ ಉಸ್ತುವಾರಿ ವಹಿಸಿದೆಂದು ತಿಳಿಸಿದರು. ಸುವರ್ಣ ಆರೋಗ್ಯ ಟ್ರಸ್ಟನ್ ಕಾರ್ಯಕ್ಕೆ ಮತ್ತು ಅವರ ತಂಡದ ಸದಸ್ಯರ ಕೆಲಸ ಅಭಿನಂದನೀಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಮಿತ್ರರಿಗೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಕ್ಕೆ ಪ್ರಂಶಸೆ ಪತ್ರ ನೀಡಿದರು. ಡಿಮ್ಹಾನ್ಸ್ ಸಂಸ್ಥೆಯ  ಸುವರ್ಣ ಆರೊಗ್ಯ ವೈದ್ಯಕೀಯ ಸಂಯೋಜಕರಾದ ಡಾ.ತೇಜಸ್ವಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿಗಳಾದ ಶ್ರೀಮತಿ ಶಶಿ ಪಾಟೀಲ, ಡಿಮ್ಹಾನ್ಸ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಷಣ್ಮುಖ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನರ್ಸಿಂಗ್ ಆಫಿಸರ್ ಶ್ರೀ ಹನುಮಂತ ಮುದೇವಗೋಳ್ ನಿರೂಪಿಸಿದರು. ಡಾ.ಶಾಂತೇರಿಯವರು ಪ್ರಾರ್ಥಿಸಿದರು. ರಮೇಶ ತಿಮ್ಮಾಪೂರ ರವರು ಸ್ವಾಗತಿಸಿದರು. ಡಾ.ಸುಮಯ್ಯ ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಟ್ರಸ್ಟ್,  ವಂದಿಸಿದರು. ಆರೋಗ್ಯ ಮಿತ್ರ ಸಿಬ್ಬಂದಿಯವರು, ಡಿಮ್ಹಾನ್ಸ್ ಸಂಸ್ಥೆಯ ಭೋದಕ ಮತ್ತು ಭೋದಕೇತರ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

×
ABOUT DULT ORGANISATIONAL STRUCTURE PROJECTS